ಬಗರ್ ಹುಕುಂ ಸಾಗುವಳಿ ಮಾಡುವ ರೈತರ ಸಮಸ್ಯೆ ಇಂದು ನಿನ್ನೆಯದಲ್ಲ. ಕಾಡಂಚಿನ ಜಮೀನಿನಲ್ಲಿ ಬೆಳೆ ಬೆಳೆಯುತ್ತಿರುವ ಬಹುತೇಕ ರೈತರು ಇದರಿಂದ ಹೈರಾಣಾಗಿ ಹೋಗಿದ್ದಾರೆ, ಇಂಥದ್ದೇ ವಿಷಯ ಇಟ್ಟುಕೊಂಡು ನಿರ್ದೇಶಕ ಹೃದಯಶಿವ ಮನ ಮುಟ್ಟುವ ಚಿತ್ರಕಥೆ ಮಾಡಿಕೊಂಡು ಬಿಸಿಲುಕುದುರೆ ಚಿತ್ರವನ್ನು ನಿರೂಪಿಸಿದ್ದಾರೆ. ಮೊದಲ ಚಿತ್ರದಲ್ಲಿ ಹಾರರ್ ಸಬ್ಜೆಕ್ಟ್ ಹೇಳಿದ್ದ ಅವರು, ಈಬಾರಿ ಅನ್ನದಾತನ ಸಮಸ್ಯೆಯನ್ನು ಕನ್ನಡ ಜನತೆಯ ಮುಂದೆ ತೆರೆದಿಟ್ಟಿದ್ದಾರೆ.
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವೆ ಸಾಮರಸ್ಯವಿಲ್ಲದೆ ಹೋದಾಗ ಕಾಡಂಚಿನಲ್ಲಿ ಸಾಗುವಳಿ ಮಾಡುವ ರೈತ ಯಾವರೀತಿ ಸಮಸ್ಯೆಗೆ ಸಿಲುಕುತ್ತಾನೆ ಎಂಬುದನ್ನು ಕನಕಪುರ ತಾಲ್ಲೂಕಿನ ಗ್ರಾಮವೊಂದರ ಮುಗ್ಧ ರೈತ ಚಿಕ್ಕೇಗೌಡ(ಸಂಪತ್ ಮೈತ್ರೇಯಾ)ನ ಕಥೆಯ ಮೂಲಕ ಈ ಚಿತ್ರದಲ್ಲಿ ಹೃದಯಶಿವ ಅವರು ಹೇಳಿದ್ದಾರೆ. ತನ್ನ ತಂದೆಯ ಮರಣದ ನಂತರ ತನಗಿದ್ದ ನಾಲ್ಕೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿನ ಜೀವನ ಸಾಗಿಸಬೇಕೆಂದುಕೊಂಡಿದ್ದ ಚಿಕ್ಕೇಗೌಡನಿಗೆ ಕಾಡಂಚಿನಲ್ಲಿದ್ದ ೪ ಎಕರೆ ಜಮೀನನ್ನು ಉಳಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗುತ್ತದೆ.
ಆಗ ತನ್ನ ಪೂರ್ವಜರ ಅಲಿಗೆ ಬಂದಿದ್ದ ಅರ್ಧ ಎಕರೆ ಜಮೀನನ್ನು ಮಾರಿ ಕಂದಾಯ ಇಲಾಖೆಗೆ ಓಡಾಡಿ, ಪಹಣಿ ಪತ್ರ ಮಾಡಿಸಿಕೊಳ್ಳುತ್ತಾನೆ. ಇನ್ನೇನು ಎಲ್ಲ ಸಮಸ್ಯೆ ಬಗೆಹರಿಯಿತು ಎಂದುಕೊಂಡ ಚಿಕ್ಕೇಗೌಡನಿಗೆ ಮತ್ತೆ ಸಮಸ್ಯೆ ಎದುರಾಗುತ್ತದೆ, ಕಂದಾಯ ಇಲಾಖೆ ಪಹಣಿ ಪತ್ರ ನೀಡಿದ್ದರೂ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಫಾರೆಸ್ಟ್ ಡಿಪಾರ್ಟ್ ಮೆಂಟ್ ಆ ನೆಲವನ್ನು ವಶಪಡಿಸಿಕೊಳ್ಳುತ್ತದೆ. ಈಗ ನಿಜಕ್ಕೂ ಕಂಗಾಲಾದ ಚಿಕ್ಕೇಗೌಡ ಯಾವರೀತಿ ಮುಂದುವರಿಯುತ್ತಾನೆ, ಕೊನೆಗೂ ಆತನಿಗೆ ನ್ಯಾಯ ಸಿಕ್ಕಿತೇ ಇಲ್ಲವೇ ಎನ್ನುವುದೇ ಚಿತ್ರದ ಕಥೆ.
ಇದು ಕೇವಲ ಆ ಭಾಗವೊಂದರ ರೈತರ ಕಥೆಯಲ್ಲ. ಮೈಸೂರು, ಮಡಿಕೇರಿ, ಶಿವಮೊಗ್ಗ, ಉತ್ತರ ಕನ್ನಡ ಹೀಗೆ ರಾಜ್ಯದ ಬಹುತೇಕ ಕಡೆ ಬಗರ್ ಹುಕುಂ ಸಾಗುವಳಿ ಮಾಡುವ ರೈತರೆಲ್ಲ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಷ್ಟು ಸರ್ಕಾರಗಳು ಬಂದು ಹೋದರೂ ಯಾರಿಂದಲೂ ಇದನ್ನು ಈವರೆಗೆ ಬಗೆಹರಿಸಲಾಗಿಲ್ಲ. ಇದಕ್ಕೆ ಸರ್ಕಾರವೇ ಏನಾದರೂ ಪರಿಹಾರ ನೀಡಬೇಕಾಗಿದೆ, ಇದೇ ಕಾರಣದಿಂದ ಕೆಲ ರೈತರು ಆತ್ಮಹತ್ಯೆಗೆ ಮುಂದಾಗಿದ್ದೂ ವರದಿಯಾಗಿದೆ. ಇಂಥದ್ದೊಂದು ಗಂಭೀರ ಸಮಸ್ಯೆಯನ್ನು ಇಟ್ಟುಕೊಂಡು ಅದನ್ನು ಡಾಕ್ಯುಮೆಂಟರಿ ಎನಿಸದ ಹಾಗೆ ಮನರಂಜನಾತ್ಮಕವಾಗಿ ಹೇಳುವಲ್ಲಿ ಹೃದಯಶಿವ ಗೆದ್ದಿದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಎಮೋಷನ್ಸ್ ಜೊತೆಗೆ ತಲ್ಲಣಗಳೂ ಇವೆ,
ಇಮ್ತಿಯಾಜ್ ಸುಲ್ತಾನ್ ಕಂಪೋಜ್ ಮಾಡಿರುವ ಹಾಡುಗಳು ಕೇಳಲು ಇಂಪಾಗಿವೆ. ಜೊತೆಗೆ ನಾಗಾರ್ಜುನ ಅವರ ಕ್ಯಾಮೆರಾವರ್ಕ್ ಚೆನ್ನಾಗಿದೆ. ಬಡರೈತನ ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಸಂಪತ್ ನಿಜಕ್ಕೂ ಪಾತ್ರವೇ ತಾನಾಗಿ ಅಭಿನಯಿಸಿದ್ದಾರೆ, ಉಳಿದಂತೆ ಕರಿಸುಬ್ಬು, ವಿಕ್ಟರಿ ಮಾಸು, ಮಳವಳ್ಳಿ ಸಾಯಿಕೃಷ್ಣ, ಜೋಸೈಮನ್ ಇವರೆಲ್ಲ ಕಥೆಗೆ ಪೂರಕವಾಗಿ ಬರುತ್ತಾರೆ.